ಚಿತ್ರದುರ್ಗ ಕೋಟೆ
Source: Ms Sarah Welch 

ನೂರಾರು ಪ್ರೇಕ್ಷಣಿಕಯ ಸ್ಥಳಗಳನ್ನು ಹೊಂದಿರುವ ಚಿತ್ರದುರ್ಗವು ಒಂದು ಪ್ರಮುಖ ಐತಿಹಾಸಿಕ ಸ್ಥಳ ಚಿತ್ರದುರ್ಗವು ಇತಿಹಾಸ ಪೂರ್ವದ ಕಾಲದಿಂದಲೂ ಜನವಸತಿಯಿದ್ದ ಪ್ರಾಚೀನ ನಗರ. ಇಲ್ಲಿನ ಬೆಟ್ಟದ ಗುಹೆಗಳಲ್ಲಿ ದೊರಕಿರುವ ಶಿಲಾಯುಗದವರ ಉಪಕರಣಗಳೂ ಬಂಡೆಗಳ ಮೇಲೆ ಅವರು ಬಿಡಿಸಿರುವ ಚಿತ್ರಗಳೂ ಈ ಮಾತಿಗೆ ಪುಷ್ಟಿ ನೀಡುತ್ತವೆ. ಹಿಂದಿನ ಕಾಲದವರ ಸಮಾಧಿಗಳು ಅಲ್ಲಲ್ಲಿ ಕಂಡುಬಂದಿವೆ. ಸ್ಥಳ ಪುರಾಣದ ಪ್ರಕಾರ ಚಿತ್ರದುರ್ಗವು ಹಿಡಿಂಬನ ರಾಜಧಾನಿಯಾಗಿದ್ದ ಹಿಡಿಂಬಪಟ್ಟಣ, ಭೀಮನಿಗೂ ಹಿಡಿಂಬನಿಗೂ ಯುದ್ಧ ನಡೆದುದು ಇಲ್ಲಿಯೇ ಎನ್ನುತ್ತಾರೆ. ಚಂದ್ರವಳ್ಳಿ ಪ್ರದೇಶದ ಅಂಕಲಿಮಠದ ಬಳಿ ಇರುವ ಗುಹೆಯೊಂದರಲ್ಲಿ ಸ್ಥಾಪಿಸಲಾಗಿರುವ ಶಿವಲಿಂಗಗಳನ್ನು ಪಾಂಡವರು ನೆಲೆಗೊಳಿಸಿದರು ಎಂದು ಶಾಸನವೊಂದು ಹೇಳುತ್ತದೆ. ಚಿತ್ರದುರ್ಗದ ಸನಿಹದಲ್ಲಿರುವ ಚಂದ್ರವಳ್ಳಿಯಲ್ಲಿ ನಡೆದಿರುವ ಉತ್ಪನನ ಹಾಗೂ ಇತರ ಆಧಾರಗಳು ಮೊದಲು ಇಲ್ಲಿ ಔತ್ತರೇಯರು ಆಳಿದರು ಎನ್ನುತ್ತವೆ. ಕ್ರಿಶ .2 ನೇ ಶತಮಾನದಲ್ಲಿ ಇದು ಮೌರ್ಯರ ಸಾಮಂತರಾಗಿದ್ದ ಶಾತವಾಹನರಿಗೆ ವಶವಾಯಿತು. 

ಆಗ ಇಲ್ಲಿನ ಸುತ್ತಮುತ್ತಲು ಬೌದ್ಧಧರ್ಮವು ಪ್ರಚಾರದಲ್ಲಿತ್ತು. ಅನಂತರ ಇದು ಕದಂಬರ ಆಳ್ವಿಕೆಗೆ ಸೇರಿತು. ಚಂದ್ರವಳ್ಳಿಯಲ್ಲಿರುವ ಕ್ರಿ.ಶ.ಸು.3 ನೇ ಶತಮಾನದ ಮಧ್ಯಭಾಗದಲ್ಲಿ ಮಯೂರಶರ್ಮನು ನಿಲ್ಲಿಸಿದ ಶಾಸನ ಈ ಅಂಶವನ್ನು ಸಮರ್ಥಿಸುತ್ತದೆ. ಮುಂದೆ ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು,, ಚೋಳರು ಮೊದಲಾದವರು ಇಲ್ಲಿ ಆಳಿದ ಕುರುಹುಗಳಿವೆ. ನಂತರ ಇಲ್ಲಿ ಹೊಯ್ಸಳರ ಆಧಿಪತ್ಯ ನಡೆಯಿತು. ಅವರ ಕಾಲದ ಅನೇಕ ಶಾಸನಗಳನ್ನು ಇಲ್ಲಿ ಕಾಣಬಹುದು. ಅವರಾದ ಮೇಲೆ ವಿಜಯನಗರದವರು ಚಿತ್ರದುರ್ಗದ ಮೇಲೆ ಅಧಿಕಾರ ನಡೆಸಿದರು. ವಿಜಯನಗರದ ಕದನದ ನಂತರ ಅವರ ಸಾಮಂತರಾಗಿದ್ದ ಕಾಮಗೇತಿವಂಶದ ಪಾಳೆಯಗಾರರು ಕ್ರಿ.ಶ .1568 ರಿಂದ 1779 ರವರೆಗೆ ಸುಮಾರು 211 ವರ್ಷಗಳಕಾಲ ಸ್ವತಂತ್ರವಾಗಿ ರಾಜ್ಯಭಾರ ಮಾಡಿದರು. ಅನಂತರ ಇಲ್ಲಿ ಹೈದರ್ ಆಲಿ ಟಿಪ್ಪುಸುಲ್ತಾನರ ಹುಕುಂ ನಡೆಯಿತು. 

ಅವರ ನಂತರ ಮೈಸೂರರಸರು ಇಲ್ಲಿ ಆಳಿದರು . ಅಂದಿನಿಂದ ಇದು ಒಂದು ಜಿಲ್ಲಾಕೇಂದ್ರವಾಗಿ ಮುಂದುವರಿದಿದೆ. ಪಾಳೆಯಗಾರ ಆಳ್ವಿಕೆಯ ಕಾಲ ಚಿತ್ರದುರ್ಗ ಇತಿಹಾಸದಲ್ಲಿ ಮಹತ್ವಪೂರ್ಣವಾಗಿದೆ. ಈ ಕಾಲದಲ್ಲಿ ಇಲ್ಲಿನ ಕೋಟೆಕೊತ್ತಲಗಳು. ಬಲಗೊಂಡವು. ಗುಡಿಗೋಪುರಗಳು, ಮಠಮಾನ್ಯಗಳು, ಉದ್ದಾರವಾದವು. ಅದರ ರಾಜಕೀಯ ಸ್ಥಾನಮಾನ ವೃದ್ಧಿಸಿತು. ಚಿತ್ರದುರ್ಗವು ಪಾಳೆಯಗಾರರ ರಾಜಧಾನಿಯಾಗಿ ವೈಭವದಿಂದ ಮೆರೆಯಿತು. ಆದ್ದರಿಂದ ಅವರು ಇಂದಿಗೂ ಸ್ಮರಣೀಯರು. ಚಿತ್ರನಾಯಕ ಇಲ್ಲಿ ಆಳಿದ ಪಾಳೆಯಗಾರರ ಮೂಲಪುರುಷನೆಂದೂ ಅವನಿಂದಲೇ ಈ ಊರಿಗೆ ಚಿತ್ರದುರ್ಗವೆಂಬ ಹೆಸರು ಬಂದಿತೆಂದೂ ಹೇಳುತ್ತಾರೆ. ಇಲ್ಲಿನ ಪಾಳೆಯಗಾರರು ಮದಕರಿ ಎಂಬ ಬಿರುದು ಧರಿಸುತ್ತಿದ್ದರು. 

ಅದು ಬಂದ ಬಗ್ಗೆ ಒಂದು ಐತಿಹ್ಯವಿದೆ. ಒಮ್ಮೆ ಚಿತ್ರನಾಯಕನು ದೆಹಲಿಗೆ ಕಾರ್ಯಾರ್ಥವಾಗಿ ಹೋದನು. ಆಗ ಅಲ್ಲಿ ತೊಗಲಕ್ ವಂಶದ ಆಳ್ವಿಕೆ ನಡೆದಿತ್ತು. ಒಂದು ದಿನ ಚಕ್ರವರ್ತಿಯ ಮದಗಜವು ಮತ್ತೇರಿ ನಗರದಲ್ಲಿ ಜನರನ್ನೂ ವಸ್ತುಗಳನ್ನೂ ಧ್ವಂಸ ಮಾಡುತ್ತಾ ಧಾಂದಲೆಮಾಡುತ್ತಿತ್ತು. ಯಾರೂ ಅದನ್ನು ಎದುರಿಸಿ ಮರ್ದಿಸಲು ಮುಂದೆ ಬಾರದೇ ಹೋದಾಗ ಆನೆಗಳನ್ನು ಪಳಗಿಸುವ ತಂತ್ರದಲ್ಲಿ ನಿಪುಣನಾಗಿದ್ದ ಚಿತ್ರನಾಯಕನು ಆ ಮದ್ದಾನೆಯನ್ನು ಹಿಡಿದು ಪಳಗಿಸಿದನು. ಇದರಿಂದ ಸಂತೋಷಗೊಂಡ ದೆಹಲಿ ಸುಲ್ತಾನನು ಅವನಿಗೆ ಮರ್ಯಾದೆ ಮಾಡಿ ಮದಕರಿ ಎಂಬ ಬಿರುದಿತ್ತನಂತೆ. ಈ ಬಿರುದನ್ನು ಅವನ ವಂಶದವರೂ ಧರಿಸಿ ಮದಕರಿನಾಯಕರೆಂದು ಹೆಸರು ಪಡೆದರು.

ವೀರನೂ ಸಾಹಸಿಯೂ ಆದ ಮತ್ತಿತಿಮ್ಮಣ್ಣನಾಯಕನು ತನ್ನ ಪರಾಕ್ರಮದಿಂದ ವಿಜಯನಗರದ ಅರಸರಿಂದ ಅಧಿಪತ್ಯವನ್ನು ಗಳಿಸಿ ಕೊಂಡು ಚಿತ್ರದುರ್ಗದ ಮೊದಲನೆ ಪಾಳೆಯಗಾರನಾದನು. ಅವನ ಮಗ ಓಬ್ಬಣ್ಣನಾಯಕನು ಚಿತ್ರದುರ್ಗ ರಾಜ್ಯವನ್ನು ಸ್ವತಂತ್ರವೆಂದು ಘೋಷಿಸಿ ಆಡಳಿತ ನಡೆಸಿದನು. ಅವನ ನಂತರ ರಾಜ್ಯವಾಳಿದ ಕಸ್ತೂರಿರಂಗಪ್ಪ ನಾಯಕನು ಗಡಿಗಳನ್ನು ವಿಸ್ತರಿಸಿದನು. ಇಮ್ಮಡಿ ಮದಕರಿನಾಯಕನು ಪಟ್ಟವೇರಿ ಆಳಿದ ಮೇಲೆ ಗದ್ದುಗೆಗೆ ಬಂದ ನಾಯಕರು ದುರ್ಬಲರಾಗಿ ದ್ದರು. ರಾಜ್ಯದಲ್ಲಿ ದಳವಾಯಿಗಳ ಪ್ರಾಬಲ್ಯ ಹೆಚ್ಚಿ ದಂಗೆಗಳಾಗಿ ನಾಯಕರ ಕೊಲೆಗಳೂ ನಡೆದವು . ಆ ಸಮಯದಲ್ಲಿದ್ದ ಬಿಳಿ ಜೋಡಿನಲ್ಲಿದ್ದ ಪಾಳೆಯಗಾರರ ವಂಶೀಕ ಭರಮಣ್ಣನಾಯಕನು ದಂಗೆಯನ್ನು ಅಡಗಿಸಿ ಪಟ್ಟಕ್ಕೆ ಬಂದನು. ರಾಜ್ಯದಲ್ಲಿ ಶಿಸ್ತನ್ನು ತಂದನು. ಬಿಚ್ಚುಗತ್ತಿವೀರನೆಂದು ಹೆಸರಾದನು. ಅವನ ನಂತರ ಗದ್ದುಗೆಗೇರಿದ ಹಿರಿಯ ಮದಕರಿನಾಯಕನು ಯುದ್ಧಮಾಡುತ್ತಾ ವೀರಸ್ವರ್ಗ ಪಡೆದನು. 

ತರುವಾಯ ಪಟ್ಟಕ್ಕೆ ಬಂದ ಇಮ್ಮಡಿಕಸ್ತೂರಿರಂಗಪ್ಪನಾಯಕನಿಗೆ ಸಂತತಿಯಿಲ್ಲದೆ ಸಿಂಹಾಸನವು ತೆರವಾಯಿತು. ಆಗ್ಗೆ ಜಾನಕಲ್ಲಿನಲ್ಲಿದ್ದ ಪಾಳೆಯಗಾರರ ಸಂತತಿಯ ಕಿರಿಯ ಮದಕರಿಗೆ ಪಟ್ಟಕಟ್ಟಲಾಯಿತು. ಅಸಾಮಾನ್ಯ ಪರಾಕ್ರಮಿಯೂ ರಣಪ್ರಚಂಡನೂ ಆದ ಇವನು ರಾಜಾವೀರ ಮದಕರಿನಾಯಕನೆಂದು ಪ್ರಸಿದ್ಧನಾದನು. ಇವನ ಕಾಲದಲ್ಲಿ ಚಿತ್ರದುರ್ಗ ರಾಜ್ಯವು ತನ್ನ ಇತಿಹಾಸದಲ್ಲಿ ಅತ್ಯುನ್ನತಸ್ಥಿತಿಯನ್ನೇರಿತು. ದಕ್ಷಿಣ ಭಾರತದಲ್ಲಿ ಪ್ರಮುಖ ರಾಜ್ಯವಾಗಿ ಮರೆಯಿತು. ವಿಧಿವಶದಿಂದ ಇವನ ಕಾಲದಲ್ಲೇ ಅಂದರೆ ಕ್ರಿಶ.1779 ರಲ್ಲಿ ಚಿತ್ರದುರ್ಗ ಹೈದರಾಲಿಯ ವಶವಾಯಿತು. ಚಿತ್ರದುರ್ಗಕ್ಕೆ ಹಿಂದೆ ಅನೇಕ ಹೆಸರುಗಳಿದ್ದ ಬಗ್ಗೆ ದಾಖಲೆಗಳಿವೆ. ದ್ವಾಪರಯುಗದಲ್ಲಿ ಅದು ಹಿಡಿಂಬ ಪಟ್ಟಣವೆನಿಸಿತ್ತು. ಕದಂಬರ ಕಾಲದಲ್ಲಿ ಚಂದ್ರವಳ್ಳಿ ಎಂಬ ಹೆಸರು ಪಡೆದಿತ್ತು. ಚಾಲುಕ್ಯರ ಕಾಲದಲ್ಲಿ ಅದು ಸೂಳಲ್ಲಾಯಿತು. ಹೊಯ್ಸಳರು ಅದನ್ನು ಪೆರುಮಾಳೆಪುರ ಎಂದರು. ವಿಜಯನಗರದ ಕಾಲದಲ್ಲಿ ಅದು ಬೆ(ಚಿ ?) ಮ್ಮತ್ತನಕಲ್ಲು ಅಥವಾ ಬೆಮ್ಮತ್ತ ನೂರಾಗಿತ್ತು. ಪಾಳೆಯಗಾರರ ಕಾಲದಲ್ಲಿ ಅದು ಛತ್ರಕಲ್ ದುರ್ಗ-ಚಿತ್ರಕಲ್ ದುರ್ಗವಾಯಿತು. ಟಿಪ್ಪುಸುಲ್ತಾನ್ ಅದನ್ನು ಫರೂಕಾಬಾದ್ ಎಂದು ಕರೆದನು. ಬ್ರಿಟಿಷರ ಕಾಲದಲ್ಲಿ ಅದಕ್ಕೆ ಚಿತ್ತಲ್ ಡುಗ್ ಎಂದು ಹೆಸರಿತ್ತು. ಈಚೆಗೆ ಅದು ಚಿತ್ರದುರ್ಗವೆಂಬ ಸುಂದರ ಹೆಸರನ್ನು ಪಡೆದಿದೆ.

ಕುತೂಹಲ ಮೂಡಿಸುವ ಸ್ಥಳ ಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯ ವಾಸಸ್ಥಳದ ನೆಲೆಗಳು, ಪ್ರಾಚೀನ, ಐತಿಹಾಸಿಕ, ಧಾರ್ಮಿಕ ಪ್ರಾಶಸ್ತ್ಯದ ಸ್ಥಳಗಳಿಂದ ತುಂಬಿರುವ ಚಿತ್ರದುರ್ಗ ಜಿಲ್ಲೆ ಸಾವಿರಾರು ವರ್ಷಗಳ ನಾಗರಿಕತೆಗಳ ತವರು ಹಾಗೂ ಪ್ರಾಚೀನತೆ, ಆಧುನಿಕತೆಗಳ ಸಮ್ಮಿಲನ ಹೊಂದಿರುವ ಪ್ರದೇಶವಾಗಿದೆ. ನಾಡಿನ ಎಲ್ಲಾ ಭಾಗಗಳಿಂದ ವಾಹನಗಳ ಸೌಕರ್ಯವಿದೆ.

ಚಿತ್ರದುರ್ಗವು ಇತಿಹಾಸ ಪೂರ್ವದ ಕಾಲದಿಂದಲೂ ಜನವಸತಿಯಿದ್ದ ಪ್ರಾಚೀನ ನಗರ. ಇಲ್ಲಿನ ಬೆಟ್ಟದ ಗುಹೆಗಳಲ್ಲಿ ದೊರಕಿರುವ ಶಿಲಾಯುಗದವರ ಉಪಕರಣಗಳೂ, ಬಂಡೆಗಳ ಮೇಲೆ ಅವರು ಬಿಡಿಸಿರುವ ಚಿತ್ರಗಳೂ, ಹಿಂದಿನ ಕಾಲದವರ ಸಮಾಧಿಗಳು ಐತಿಹಾಸಿಕ ಚಿತ್ರಣಕ್ಕೆ ಸಾಕ್ಷಿಯಾಗಿವೆ. ಸ್ಥಳ ಪುರಾಣದ ಪ್ರಕಾರ ಚಿತ್ರದುರ್ಗವು ಹಿಡಿಂಬನ ರಾಜಧಾನಿಯಾಗಿದ್ದ ಹಿಡಿಂಬ ಪಟ್ಟಣ. ಭೀಮನಿಗೂ ಹಿಡಿಂಬನಿಗೂ ಯುದ್ಧ ನಡೆದದ್ದು ಇಲ್ಲಿಯೇ ಎನ್ನುತ್ತಾರೆ. ಚಂದ್ರವಳ್ಳಿ ಪ್ರದೇಶದ ಅಂಕಲಿಮಠದ ಬಳಿ ಇರುವ ಗುಹೆಯೊಂದರಲ್ಲಿ ಸ್ಥಾಪಿಸಲಾಗಿರುವ ಶಿವಲಿಂಗಗಳನ್ನು ಪಾಂಡವರು ಸ್ಥಾಪಿಸಿದರೆಂದು ಶಾಸನವೊಂದು ಹೇಳುತ್ತದೆ. ಚಿತ್ರದುರ್ಗದ ಸನಿಹದಲ್ಲಿರುವ ಚಂದ್ರವಳ್ಳಿಯಲ್ಲಿ ನಡೆದಿರುವ ಉತ್ಖನನ ಹಾಗೂ ಇತರೆ ಆಧಾರಗಳಿಂದ ಮೊದಲು ಇಲ್ಲಿ ಔತ್ತರೇಯರು ಆಳಿದರು ಎನ್ನುತ್ತವೆ. ಕ್ರಿ.ಶ ೦೨ನೇ ಶತಮಾನದಲ್ಲಿ ಇದು ಮೌರ್ಯರ ಸಾಮಂತರಾಗಿದ್ದ ಶಾತವಾಹನರಿಗೆ ವಶವಾಯಿತು. ಆಗ ಬೌದ್ಧ ಧರ್ಮವು ಪ್ರಚಾರದಲ್ಲಿತ್ತು. ಅನಂತರ ಇದು ಬನವಾಸಿ ಕದಂಬರ ಆಳ್ವಿಕೆಗೆ ಸೇರಿತು. ಚಂದ್ರವಳ್ಳಿಯಲ್ಲಿರುವ ಕ್ರಿ.ಶ. ಸುಮಾರು ೦೩ನೇ ಶತಮಾನದ ಮಧ್ಯಭಾಗದಲ್ಲಿ ಮಯೂರಶರ್ಮನು ನಿಲ್ಲಿಸಿದ ಶಾಸನ ಈ ಅಂಶವನ್ನು ಸಮರ್ಥಿಸುತ್ತದೆ. ಮುಂದೆ 

ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಚೋಳರು ಮೊದಲಾದವರು ಆಳಿದ ಕುರುಹುಗಳಿವೆ. ನಂತರ ಹೊಯ್ಸಳರ ಆಧಿಪತ್ಯ ನಡೆಯಿತು. ಅವರ ಕಾಲದ ಅನೇಕ ಶಾಸನಗಳನ್ನು ಇಲ್ಲಿ ಕಾಣಬಹುದು. ಅವರಾದ ಮೇಲೆ ವಿಜಯನಗರ ಸಾಮ್ರಾಜ್ಯದವರು ಚಿತ್ರದುರ್ಗದ ಮೇಲೆ ಅಧಿಕಾರ ನಡೆಸಿದರು. ವಿಜಯನಗರದ ಕದನದ ನಂತರ ಅವರ ಸಾಮಂತರಾಗಿದ್ದ ಕಾಮಗೇತಿ ವಂಶದ ಪಾಳೆಯಗಾರರು ಕ್ರಿ.ಶ. ೧೫೬೮ ರಿಂದ ೧೭೭೯ ರವರೆಗೆ ಸುಮಾರು ೨೧೧ ವರ್ಷಗಳ ಕಾಲ ಸ್ವತಂತ್ರವಾಗಿ ರಾಜ್ಯಭಾರ ಮಾಡಿದರು.

Source: Ankit Darsi 

ಕೋಟೆ_ಆಳಿದ_ಪಾಳೆಯಗಾರರು

ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಮತ್ತು ಹಿರೇಗುಂಟನೂರು ಶಾಸನಗಳ ರೀತ್ಯಾ ಕ್ರಿ.ಶ. ಸುಮಾರು ೧೫೪೯ರಿಂದಲೇ ತಿಮ್ಮಣ್ಣನಾಯಕನು ಈ ಪ್ರಾಂತ್ಯದ ನಾಯಕ ಆಗಿದ್ದನೆಂಬುದು ತಿಳಿಯುತ್ತದೆ. ಜೊತೆಗೆ ಕೊನೆಯ ಮೆದಕೇರಿನಾಯಕನ ಆಳ್ವಿಕೆ ೧೭೭೯ರಲ್ಲಿ ಕೊನೆಗೊಳ್ಳುತ್ತದೆ. ಈ ನಾಯಕರು ಆಳಿದ್ದು ಕ್ರಿ.ಶ. ೧೫೪೯ ರಿಂದ ೧೭೭೯ ರವರೆಗೆ ಅಂದರೆ ಒಟ್ಟು ೨೩೧ ವರ್ಷ ಎನ್ನುವುದು ಸ್ಪಷ್ಟವಾಗುತ್ತದೆ. ಶಾಸನ, ವಂಶಾವಳಿ ಮತ್ತು ಕೈಫಿಯತ್ತು ಮಾಹಿತಿಯ ಸಮನ್ವಯದಲ್ಲಿ ಪಾಳೆಯಗಾರರ ಆಳ್ವಿಕೆ ವಿವರ ಸಂಗ್ರಹಿಸಬಹುದಾಗಿದೆ. 

ಪಾಳೆಗಾರಿಕೆ_ಪ್ರಾರಂಭ

ಚಿತ್ರದುರ್ಗದ ಪಾಳೇಪಟ್ಟಿನ ಸ್ಥಾಪಕ ಅತುಲ ಪರಾಕ್ರಮಿಯೂ... ಆಸೀಮ ಧೈರ್ಯಶಾಲಿಯೂ ಆದ ಮತ್ತಿ ತಿಮ್ಮಣ್ಣ ನಾಯಕ...

ಈತನ ಯುದ್ಧ ಚಾತುರ್ಯವನ್ನೂ... ಎಂದಿಗೂ ಸೋಲೊಪ್ಪದ ಶೌರ್ಯವನ್ನೂ ಕಣ್ಣಾರೆ ಕಂಡ ವಿಜಯನಗರದ ದಳಪತಿಗಳು ಕ್ರಿಸ್ತಶಕ 1593 ರ ವಿಭವ ಸಂವತ್ಸರದ ಒಂದು ಶುಭಘಳಿಗೆಯಲ್ಲಿ ಮತ್ತಿ ತಿಮ್ಮಣ್ಣ ನಾಯಕರಿಗೆ ಚಿತ್ರದುರ್ಗದ ಅಧಿಪತ್ಯವನ್ನು ನೀಡಿದರು...

ಹಾಗಂತ... ಅವರು ಕೊಟ್ಟ ಮೇಲೆಯೇ ಚಿತ್ರದುರ್ಗದ ಉದಯವಾಯಿತೇನು... ದುರ್ಗದ ಸಿಂಹಾಸನದ ಅಲಂಕರಿಸಿದ್ದಕ್ಕೇನೇ ಮತ್ತಿ ತಿಮ್ಮಣ್ಣ ನಾಯಕರು ದೊರೆ ಎನಿಸಿಕೊಂಡರೇನು...

ಅಲ್ಲವೇ ಅಲ್ಲ...

ದುರ್ಗದ ಸಿಂಹಾಸನ ದಕ್ಕೊದಕ್ಕೆ ಬಹಳ ಮುಂಚಿತವಾಗೇ ಮತ್ತಿ ತಿಮ್ಮಣ್ಣ ನಾಯಕರು "ಹಡವನ ಹಾಳಿ" ಗೆ ಬಂದು ತಮ್ಮ ಪಾಳೆಪಟ್ಟನ್ನು ಸ್ಥಾಪಿಸಿಕೊಂಡಿದ್ದರು... ಕ್ರಿಸ್ತಶಕ 1565 ರ ಐತಿಹಾಸಿಕ ತಾಳೀಕೋಟೆ ಯುದ್ಧದಲ್ಲಿ ವಿಜಯನಗರದ ಪ್ರಾಬಲ್ಯ ಸಂಪೂರ್ಣವಾಗಿ ಕುಸಿದು ಹೋಗಿತ್ತು...

ಇತ್ತ... ಸ್ವತಃ ವೀರಾಗ್ರಣಿಯಾದ ಮತ್ತಿ ತಿಮ್ಮಣ್ಣ ನಾಯಕರು ಯಾವ ದೊಣ್ಣೆ ನಾಯಕನ ಅಪ್ಪಣೆಗೂ ಕಾಯದೆ ಒಂದಾದ ಮೇಲೊಂದು ಪಾಳೆಪಟ್ಟನ್ನು ಗೆಲ್ಲುತ್ತಾ ತಮ್ಮ ಸೀಮೆಯನ್ನು ಭರ್ಜರಿಯಾಗಿ ಕಟ್ಟುತ್ತಿದ್ದರು... ಇದನ್ನೆಲ್ಲಾ ಮೂಕವಿಸ್ಮಿತರಾಗಿ ನೋಡುತ್ತಿದ್ದ ವಿಜಯನಗರದ ದಳಪತಿಗಳು ಇಂಥಾ ವೀರ್ಯವಂತನೊಬ್ಬ ನಮ್ಮ ಸ್ನೇಹಿತನಾಗಿದ್ದರೆ ನಮಗೇ ಲಾಭವೆಂದರಿತು ಅವರಿಗೆ ದುರ್ಗದ ನಾಯಕತ್ವವನ್ನು ನೀಡಿದರು... ಹೀಗೆ ಸಿಕ್ಕ ಅವಕಾಶವನ್ನು ಸಂಪೂಣವಾಗಿ ಉಪಯೋಗಿಸಿಕೊಂಡ ನಾಯಕರು ಅತ್ಯಂತ ದುರ್ಭೆದ್ಯವಾದ ಏಳುಸುತ್ತಿನ ಕೋಟೆಯನ್ನು ನಿರ್ಮಿಸಿ ದುರ್ಗದ ಸಿಂಹಾಸನದ ಮೇಲೆ ವಿರಾಜಮಾನರಾದರು.

ಮುಂದೆ ಬಂದಂತಹ ನಾಯಕರ ವಂಶಸ್ಥರೆಲ್ಲ ಯಾರ ಹಂಗಿಗೂ ಬೀಳದೆ ಸರ್ವತಂತ್ರ ಸ್ವತಂತ್ರರಾಗಿ ತಮ್ಮ ಸರಹದ್ದನ್ನು ವಿಸ್ತರಿಸುತ್ತಾ ಬಂದರು.

  1. ಮತ್ತಿ ತಿಮ್ಮಣ್ಣನಾಯಕ (ಕ್ರಿ.ಶ.ಸು. ೧೫೪೯-೧೫೫೭), 
  2. ಒಂದನೇ ಓಬಣ್ಣನಾಯಕ ಅಥವಾ ಒಂದನೇ ಮೆದಕೇರಿ ನಾಯಕ (ಕ್ರಿ.ಶ.ಸು. ೧೫೫೭-೧೬೦೩),
  3. ಒಂದನೇ ಚಿಕ್ಕಣ್ಣನಾಯಕ ಅಥವಾ ಹಿರಿಯ ಚಿಕ್ಕಣ್ಣನಾಯಕ (ಕ್ರಿ.ಶ.೧೬೦೩-೧೬೦೯),
  4. ಒಂದನೇ ಇಮ್ಮಡಿ ಮೆದಕೇರಿ ನಾಯಕ ಕ್ರಿ.ಶ. ೧೬೦೯-೧೬೨೯),
  5. ಒಂದನೇ ಕಸ್ತೂರಿ ರಂಗಪ್ಪನಾಯಕ (ಕ್ರಿ.ಶ. ೧೬೨೯-೧೬೫೩(೨?),
  6. ಎರಡನೇ ಇಮ್ಮಡಿ ಮೆದಕೇರಿನಾಯಕ (ಕ್ರಿ.ಶ. ೧೬೫೩-೧೬೭೫),
  7. ಎರಡನೇ ಓಬಣ್ಣನಾಯಕ (ಕ್ರಿ.ಶ. ೧೬೭೫),
  8. ಎರಡನೇ ಚಿಕ್ಕಣ್ಣನಾಯಕ:- (ಕ್ರಿ.ಶ. ೧೬೭೫-೧೬೮೬), 
  9. ಮುಮ್ಮಡಿ ಮೆದಕೇರಿನಾಯಕ (ಲಿಂಗಣ್ಣನಾಯಕ):- (ಕ್ರಿ.ಶ. ೧೬೮೬-೧೬೮೮),
  10. ದೊಣ್ಣೆ ರಂಗಪ್ಪನಾಯಕ (ಕ್ರಿ.ಶ.೧೬೮೮-೧೬೮೯), 
  11. ನರಗನಹಳ್ಳಿ ರಘುವಪ್ಪನಾಯಕ (ಕ್ರಿ.ಶ.೧೬೮೯) 
  12. ಸೂರೇಕಾಂತಿ ರಂಗಪ್ಪನಾಯಕ (ಕ್ರಿ.ಶ. ೧೬೮೯),
  13. ಬಿಚ್ಚುಗತ್ತಿ ಬರಮಣ್ಣನಾಯಕ (ಕ್ರಿ.ಶ. ೧೬೮೯-೧೭೨೧),
  14. ಹಿರೇಮೆದಕೇರಿನಾಯಕ (ಕ್ರಿ.ಶ. ೧೭೨೧-೧೭೪೮),
  15. ಎರಡನೇ ಕಸ್ತೂರಿ ರಂಗಪ್ಪನಾಯಕ:- (ಕ್ರಿ.ಶ.
  16. ೧೭೪೮-೧೭೫೪), ಕೊನೆಯ ಮೆದಕೇರಿನಾಯಕ:- (ಕ್ರಿ.ಶ. ೧೭೫೪-೧೭೭೯), ಕೊನೆಗೆ ಚಿತ್ರದುರ್ಗ ಸಂಸ್ಥಾನವು ಹೈದರಾಲಿಯ ವಶವಾಯಿತು. ಅನಂತರ ಇಲ್ಲಿ ಹೈದರ್‌ಆಲಿ, ಟಿಪ್ಪು ಸುಲ್ತಾನರ ಹುಕುಂ ನಡೆಯಿತು. ಅವರ ನಂತರ ಮೈಸೂರು ಅರಸರು ಆಳಿದರು. ಅಂದಿನಿಂದ ಚಿತ್ರದುರ್ಗ ಒಂದು ಜಿಲ್ಲಾ ಕೇಂದ್ರವಾಗಿ ಮುಂದುವರೆದಿದೆ.

ಕೋಟೆಯೊಳಗೆ_ಪ್ರವೇಶ

1. ಹೊರಸುತ್ತು ಕೋಟೆ:
 ಇದು ಚಿನಲಾದ್ರಿಯ ಸಪ್ತಶಿಖರಗಳನ್ನೂ ಪೂರ್ವ ಮತ್ತು ಉತ್ತರ ಭಾಗಗಳಲ್ಲಿ ಹಳೆಯ ಊರನ್ನೂ ಒಳಗೊಂಡಿದೆ . ಇದರ ಉದ್ದ ಸುಮಾರು 13 ಕಿ.ಮೀ. ತಪ್ಪಲು ಪ್ರದೇಶದಲ್ಲಿ ಈ ಕೋಟೆಯ ಬಹುಭಾಗ ನಾಶವಾಗಿದೆ .ಇದರಲ್ಲಿ ಐದು ಹೆಬ್ಬಾಗಿಲುಗಳಿವೆ . ಹಿಂದೆ ಚಿತ್ರದುರ್ಗದ ಪ್ರವೇಶಕ್ಕೆ ಇವು ಪ್ರಮುಖ ದ್ವಾರಗಳಾಗಿದ್ದವು . ಚಿತ್ರದುರ್ಗ ಕೋಟೆಯ ಬಾಗಿಲುಗಳು

  1. ರಂಗಯ್ಯನ ಬಾಗಿಲು
  2. ಲಾಲ್‌ಕೋಟೆ ಬಾಗಿಲು
  3. ಹನುಮನ ಬಾಗಿಲು
  4. ಉಚ್ಚಂಗಿ ಬಾಗಿಲು 
  5. ಸಂತೆ ಬಾಗಿಲು

2. ಎರಡನೇ ಸುತ್ತಿನ ಕೋಟೆ / ಗಾರೆ ಬಾಗಿಲು:
ಉತ್ಸವಾಂಬಾ ದೇವಾಲಯದ ಮುಂದಿನ ರಸ್ತೆಯಲ್ಲಿ ದಕ್ಷಿಣಕ್ಕೆ ಸ್ವಲ್ಪ ದೂರ ಸಾಗಿದರೆ ಎರಡನೇ ಸುತ್ತಿನ ಕೋಟೆಯ ಅವಶೇಷಗಳನ್ನೂ ಅದರ ಹೆಬ್ಬಾಗಿಲಾದ ಗಾರೇಬಾಗಿಲನ್ನು ಕಾಣುತ್ತೆವೆ . ಎರಡನೇ ಸುತ್ತಿನ ಕೋಟೆಯು ಚಿನ್ಮೂಲಾದ್ರಿಯ ಸಪ್ತಗಿರಿಗಳನ್ನು ಬಳಸಿದ್ದು ಈಗ ಅದರ ಹಲವಾರು ಭಾಗಗಳು ಬಿದ್ದು ಹೋಗಿವೆ . ಗಾರೆಯಲ್ಲಿ ಕಟ್ಟಲಾಗಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ . ಇದರ ಪಕ್ಕದಲ್ಲಿ ಗಾರೆಬಾಗಿಲ ಈಶ್ವರ ದೇವಾಲಯವಿದೆ . ದ್ವಾರದ ಎಡಕ್ಕಿರುವ ದಿಬ್ಬದ ಮೇಲೆ ಶ್ರೀ ಏಕನಾಥೇಶ್ವರಿ ದೇವಿಯ ಪಾದಗಟ್ಟೆಯಿದೆ . ಪ್ರತಿ ವರ್ಷ ಚೈತ್ರಮಾಸ ದಲ್ಲಿ ಇಲ್ಲಿ ನಡೆಯುವ ಸಿಡಿ ಎಂಬ ಜಾತ್ರೆಗೆ ಸಹಸ್ರಾರು ಜನ ಸೇರುತ್ತಾರೆ . ಇಲ್ಲಿಂದ ಬಸವನ ಬುರುಜಿಗೆ ಹೋಗಲು ಮಾರ್ಗವಿದೆ .

3. ಮೂರನೇ ಮತ್ತು ಕೋಟೆ / ಕಾಮನ ಬಾಗಿಲು:
ಗಾರೆ ಬಾಗಿಲಿನಿಂದ ದಕ್ಷಿಣಕ್ಕೆ ಸ್ವಲ್ಪ ದೂರ ಸಾಗಿದರೆ ಮೂರನೇ ಸುತ್ತಿನ ಕೋಟೆ ಕಾಣುತ್ತದೆ . ಇದೂ ಚಿನ್ಮೂಲಾದ್ರಿಯ ಸಪ್ತಶಿಖರಗಳನ್ನು ಸುತ್ತಿಕೊಂಡಿದೆ . ಇದರ ಇಕ್ಕೆಲಗಳಲ್ಲೂ ಆಳವಾದ ಅಗಳಿದೆ . ಇದರ ಹೆಬ್ಬಾಗಿಲನ್ನು ಕಾಮನಬಾಗಿಲು ಎನ್ನುತ್ತಾರೆ . ಇದು ಹತ್ತಿರ ಹೋಗು ವವರೆಗೂ ಕಾಣುವುದಿಲ್ಲ . ಅದರಲ್ಲಿ ಏಳು ಹೆಡೆಸರ್ಪ , ಗಂಡಭೇರುಂಡ ರಾಜಹಂಸ , ಕಮಲ ಮೊದಲಾದ ಶಿಲ್ಪಗಳನ್ನು ಅಳವಡಿಸಲಾಗಿದೆ . ಅದರ ಮುಂದೆ ಆನೆಗೆ ನೀರು ಕುಡಿಸುತ್ತಿದ್ದ ಒಂದೇ ಕಲ್ಲಿನಲ್ಲಿ ಮಾಡಿದ ತೊಟ್ಟಿಯೂ, ಕಂದಕದಲ್ಲಿ ಕಾಮನಬಾವಿ ಎಂಬ ಜಲಾಶಯವೂ ಇದೆ. ಗಾರೆಯನ್ನಾಗಲೀ, ಮಣ್ಣನ್ನಾಗಲೀ ಬಳಸದೆ ಬೆಲ್ಲದ ಅಚ್ಚಿನಂತಹ ಭಾರಿ ಬಂಡೆಗಳನ್ನು ಉಪಯೋಗಿಸಿ ಇದನ್ನು ಕಟ್ಟಲಾಗಿದೆ. ಇದರ ಮೂಲಕ ಸಾಗುವ ಅಂಕುಡೊಂಕು ಮಾರ್ಗದಲ್ಲಿ ನಡೆದರೆ ಮಹಾದ್ವಾರ ಸಿಕ್ಕುತ್ತದೆ. 46 ಕಾಮನ ಬಾಗಿಲಿನ ಪೂರ್ವ ದಿಕ್ಕಿನ ಬಯಲಿನಲ್ಲಿ ಕಾಳಿಕಮಟೇಶ್ವರಿ ದೇವಾಲಯವಿದೆ . ಇಲ್ಲಿಂದ ಬೆಟ್ಟದ ಮೇಲೆ ಹೋಗಲು ಒಂದು ಸುರಂಗ ಮಾರ್ಗವಿದೆ ಎನ್ನುತ್ತಾರೆ.

4. ನಾಲ್ಕನೇ ಸುತ್ತಿನ ಕೋಟೆ / ಜಾಗಟೆ ಬಾಗಿಲು:

ಕಾಮನಬಾಗಿಲ ಪಶ್ಚಿಮಕ್ಕೆ ಸುಮಾರು 100 ಮೀ. ಅಂತರದಲ್ಲಿರುವ ದ ಕೋಟೆಯೇ ನಾಲ್ಕು ಸುತ್ತಿನಕೋಟೆ, ಅದರ ಮಹಾದ್ವಾರವನ್ನು ಜಾಗಟೆ ಗಳ ಬಾಗಿಲೆಂದೂ, ವಿಷದಕತ್ತಿ ಬಾಗಿಲೆಂದೂ ಕರೆಯುತ್ತಾರೆ. ಐದನೇ ಸುತ್ತಿನ ಕೋಟೆ / ಗಂಟೆ ಬಾಗಿಲು

5. ಹೈದನೆ ಸುತ್ತಿನ ಕೋಟೆ / ಜಾಗಟೆ ಬಾಗಿಲು:
ಬೆಟ್ಟದ ಮೇಲಕ್ಕೆ ಸಾಗುವ ದಾರಿಹಿಡಿದು ನಡೆದರೆ ಐದನೇ ಸುತ್ತು ಕೋಟೆಯೂ ಅದರ ಹೆಬ್ಬಾಗಿಲಾದ ಗಂಟೆ ಬಾಗಿಲೂ ಕಾಣುತ್ತವೆ . ಎದುರುಗಡೆ ಇರುವ ದಿಬ್ಬದ ಮೇಲೆ ಒಂದು ದೊಡ್ಡ ಕಟ್ಟಡದ ಅವಶೇಶಗಳು ಇವೆ . ಈ ಹೆಬ್ಬಾಗಿಲಿಗೆ ಹಿಂದೆ ಸಣ್ಣ ಸಣ್ಣ ಗಂಟೆಗಳನ್ನು ಜೋಡಿಸಿದ್ದರಿಂದ ಅದಕ್ಕೆ ಗಂಟೆಬಾಗಿಲೆಂದು ಹೆಸರಾಯಿತು ಎನ್ನುತ್ತಾರೆ.

6. ಆರನೇ ಸುತ್ತಿನ ಕೋಟೆ / ಟೀಕಿನ ಬಾಗಿಲು:
ಗಂಟೆಬಾಗಿಲನ್ನು ದಾಟಿ ಮುಂದೆ ಸಾಗಿದರೆ ಆರನೇ ಸುತ್ತಿನ ಕೋಟೆಯೂ ಅದರ ಹೆಬ್ಬಾಗಿಲಾದ ಟೀಕಿನ ಅಥವಾ ಟಾಕಿನಬಾಗಿಲೂ ಕಾಣುತ್ತವೆ. ಕೋಟೆಯ ಈ ಭಾಗವನ್ನು ಫಿರಂಗಿಕೋಟೆ ಎನ್ನುತ್ತಾರೆ. ಅದರ ಮೇಲೆ ಫಿರಂಗಿ ಗಾಡಿಗಳು ಓಡಾಡಲು ಮತ್ತು ಫಿರಂಗಿ ಇಡಲು ಅನುಕೂಲವಿರುವುದೇ ಈ ಹೆಸರು ಬರಲು ಕಾರಣ. ಇದರ ಹೆಬ್ಬಾಗಿಲು ಸುಂದರವೂ ಬಲಯುತವೂ ಆಗಿರುವುದರಿಂದ ಅದಕ್ಕೆ ಟೀಕಿನ ಅಥವಾ ಟಾಕಿನ ಬಾಗಿಲು ಎಂಬ ಹೆಸರಿದೆ . ಇದರ ಮಂಟಪದ ಒಳಗೆ ಹುಲಿಯೊಡನೆ ಕಾಳಗ , ಗಜಕಾಳಗ,ನರ್ತಕಿ, ಕಾಳಿಂಗಮರ್ದನ, ಆಂಜನೇಯ ಮೊದಲಾದ ಶಿಲ್ಪಗಳಿವೆ. ಹೆಬ್ಬಾಗಿಲ ಪಕ್ಕದಲ್ಲಿ ದಿಡ್ಡಿ ಬಾಗಿಲು ಇದೆ. ಇದರ ಬಾಗಿಲ ಬಳಿ ಎಡಕ್ಕೆ ಬಂಡೆಯೊಂದರ ಮೇಲೆ ಇತಿಹಾಸ ಪೂರ್ವಕಾಲದ ಜಿಂಕೆಯ ಚಿತ್ರವಿದೆ .

7. ಏಳನೇ ಸುತ್ತಿನಕೋಟೆ / ಏಕನಾಥೇಶ್ವರಿ ಬಾಗಿಲು:
ಟೀಕಿನ ಬಾಗಿಲನ್ನು ಹಾಯ್ದು ಮೇಲಕ್ಕೆ ಸಾಗುತ್ತಿದ್ದರೆ ದಾರಿಯಲ್ಲಿ ಏಕನಾಥೇಶ್ವರಿ ಪಾದಗಳು ಕಾಣುತ್ತವೆ. ಅದರ ಮುಂದೆ ಆನೆಯಾಕಾರದ ಬಂಡೆಯ ಮೇಲೆ ಗಣಪತಿಯನ್ನು ಬಿಡಿಸಿ ಅದರ ಮೇಲೆ ಗುಡಿಕಟ್ಟಿಸಿರುವ ಗಣಪತಿ ಮಂದಿರವಿದೆ. ಅದರ ಪಕ್ಕದಲ್ಲಿಯೇ ಭಾರಿ ಭಾರಿ ಕಲ್ಲಿನ ತೊಲೆಗಳನ್ನು ಬಳಸಿ ಕಟ್ಟಿರುವ ಗರುಡಿಮನಿ ಇದೆ ಗಣಪತಿ ದೇವಾಲಯದ ಹಿಂದೆ ಇರುವುದೇ ಏಳನೇ ಸುತ್ತಿನ ಕೋಟೆ. ಅದರ ಹೆಬ್ಬಾಗಿಲು ಏಕನಾಥೇಶ್ವರಿ ಬಾಗಿಲೆಂದು ಕರೆಯುತ್ತಾರೆ.

ಕೋಟೆಯ ಮಧ್ಯರಂಗ

ಏಳನೇ ಸುತ್ತಿನ ಬಾಗಿಲನ್ನು ದಾಟಿದ ಮೇಲೆ ಸುಂದರವಾದ ದೇವಾಲಯಗಳು, ಮರಗಿಡಗಳ ಹಚ್ಚನೆ ಹಸಿರು, ಗಾಳಿ ಮಂಟಪಗಳು, ಉಯ್ಯಾಲೆ ಕಂಭ, ದೀಪಸ್ತಂಭ, ಬೃಹನ್ಮಠ ಮೊದಲಾದುವು ಇರುವ ಕೋಟೆಯ ಮಧ್ಯರಂಗ ಸಿಗುತ್ತದೆ.

ಮಧ್ಯರಂಗಕ್ಕೆ ಕಾಲಿಟ್ರೊಡನೆಯೇ ಎತ್ತರವಾದ ಕಟ್ಟೆಯ ಮೇಲೆ ನಿಲ್ಲಿಸಿರುವ ದೀಪಸ್ತಂಭಕಾಣುತ್ತದೆ. ಇದು ಏಕನಾಥೇಶ್ವರಿ ದೇವಾಲಯದ ಗರುಡಗಂಭ. ಅದರ ಕೆಳಗೆ ಪೂರ್ವಭಾಗದಲ್ಲಿ ಕನಕಮ್ಮ ನಾಗತಿಯ ಚಿತ್ರವನ್ನೂ ಉತ್ತರ ಭಾಗದಲ್ಲಿ ಎರಡನೇ ಪಾಳೆಯಗಾರ ಗಡ್ಡದ ಮದಕರಿ ಓಬಣ್ಣನಾಯಕನ ಚಿತ್ರವನ್ನು ಕೆತ್ತಲಾಗಿದೆ . ಈ ಕಂಭವನ್ನು ಕಂಭದಮ್ಮ ಎಂದು ಜನ ಪೂಜಿಸುತ್ತಾರೆ .

ಉಯ್ಯಾಲೆ ಕಂಭ :- ದೀಪಸ್ತಂಭದ ಸನಿಹಿದಲ್ಲಿಯೇ ಇರುವ ಉನ್ನತವಾದ ಶಿಲಾಕಂಭಗಳೇ ಉಯ್ಯಾಲೆ ಕಂಭಗಳು . ಹಿಂದೆ ಇವಕ್ಕೆ ಉಯ್ಯಾಲೆ ಕಟ್ಟಿ , ಅದರಲ್ಲಿ ಏಕನಾಥೇಶ್ವರಿಯನ್ನು ಕೂರಿಸಿ ದೇವಿಯ ಉತ್ಸವ ಮಾಡುತ್ತಿದ್ದರಂತೆ.

ಓಕಳಿ ಹೊಂಡ:

ಇದೇ ಅಂಗಳದಲ್ಲಿ ಸೋಪಾನಗಳುಳ್ಳ ಚಿಕ್ಕ ಕೊಳವೊಂದಿದೆ. ಹಿಂದೆ ದೇವಿಯ ಉತ್ಸವ ಕಾಲದಲ್ಲಿ ಇದರಲ್ಲಿ ಓಕಳಿ ತುಂಬಿ ದೇವಿಗೆ ಅವಭೃತ ಸ್ನಾನಮಾಡಿಸಿ ನಂತರ ಭಕ್ತಾದಿಗಳು ಪರಸ್ಪರ ಓಕಳಿ ಎರಚಾಡಿ ಸಂತೋಷ ಪಡುತ್ತಿದ್ದರಂತೆ.

ಕೋಟೆಯ ಗೋಡೆಗಳು ಹಲವಾರು ವಿಸ್ತಾರಗಳಲ್ಲಿ ಗಮನಾರ್ಹ ಲಕ್ಷಣವೆಂದರೆ, ದೊಡ್ಡ ಗಾತ್ರದ ಗ್ರಾನೈಟ್ ಘನಗಳನ್ನು ಸೇರುವಲ್ಲಿ ಯಾವುದೇ ಸಿಮೆಂಟಿಂಗ್ ವಸ್ತುಗಳನ್ನು ಬಳಸಲಾಗಿಲ್ಲ. ಕೋಟೆಯ ಗೋಡೆಗಳ ಒಟ್ಟು ಉದ್ದ ಸುಮಾರು 8 ಕಿಲೋಮೀಟರ್ (5.0 ಮೈಲಿ) ಮತ್ತು ಸುಮಾರು 1,500 ಎಕರೆ (610 ಹೆಕ್ಟೇರ್) ಪ್ರದೇಶವನ್ನು ಒಳಗೊಂಡಿದೆ. ಗನ್ ಸ್ಥಾನಗಳೊಂದಿಗೆ ಮಿಲಿಟರಿ ಉದ್ದೇಶಗಳಿಗಾಗಿ ಮೇಲಿನ ಕೋಟೆಯನ್ನು ಬಲಪಡಿಸಿದಾಗ, ಫ್ರೆಂಚ್ ಕೂಲಿ ಸೈನಿಕರ ಸೇವೆಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಲಾಗಿದೆ. ಬೃಹತ್ 'ಪ್ಯಾಲೇಸ್ ಆಫ್ ಸ್ಟೋನ್ಸ್' ಕೋಟೆಯು ಬೆಟ್ಟದ ಮೇಲಿನ ಕಲ್ಲಿನ ಸುತ್ತಲೂ ಅನೇಕ ಕಟ್ಟಡಗಳನ್ನು ಮತ್ತು ಅನೇಕ ದೇವಾಲಯಗಳನ್ನು ಒಳಗೊಂಡಿದೆ. ಚಿತ್ರದುರ್ಗದ ನಾಯಕರ ಕೊನೆಯ ಆಡಳಿತಗಾರ ಮದಕರಿ ನಾಯಕ, 1779 ರಲ್ಲಿ ಹೈದರ್ ಅಲಿಯಿಂದ ಸೋಲುವವರೆಗೂ ಕೋಟೆಯನ್ನು ಯಶಸ್ವಿಯಾಗಿ ತಮ್ಮ ರಕ್ಷಣೆಗೆ ಬಳಸಿಕೊಂಡರು. ಈ ಕೋಟೆಯು ಕರ್ನಾಟಕದ ಈ ಭಾಗವನ್ನು ಆಳಿದ ನಾಯಕರಿಗೆ ಗೌರವ ಸೂಚಕವಾಗಿ ನಿಂತಿದೆ..

ಕೋಟೆಗಳಿಗೆ ನಂತರದ ಸೇರ್ಪಡೆಗಳನ್ನು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ, ಗಾರೆಯಲ್ಲಿ ಹೊಂದಿಸಿ, ಸಿಮೆಂಟ್ ಅಥವಾ ಸುಣ್ಣದ ತೆಳುವಾದ ಪದರದಿಂದ ಪ್ಲ್ಯಾಸ್ಟೆಡ್ ಮಾಡಿ ಮತ್ತು ಚಿತ್ರಿಸಲಾಗಿದೆ. ಆದಾಗ್ಯೂ, ಕೋಟೆಯು ಈಗ ಕ್ಷೀಣತೆಯನ್ನು ತೋರಿಸುತ್ತದೆ. ಮುಂಗಾರು ಮಳೆಯಿಂದಾಗಿ ಕೋಟೆಯಲ್ಲಿನ ಮಳಿಗೆ-ಇಟ್ಟಿಗೆ ಗೋಡೆಗಳು ಮತ್ತು ಕೋಟೆಯ ಕಣಜಗಳು ಸವೆದು ಹೋಗುತ್ತಿವೆ...

ಈ ಎಲ್ಲ ಪ್ರದೇಶವನ್ನು ಮೊದಲು 3ಬಾರಿ ಕೇವಲ 3ಗಂಟೆಯಲ್ಲಿ ನೋಡಿದ ನೆಮ್ಮದಿ ನಮ್ಮದಾಗಿತ್ತು. ಇನ್ನೊಮ್ಮೆ ಒಂದು ದಿನಗಳ ಕಾಲ ಈ ಭಾಗಕ್ಕೆ ಪ್ರವಾಸ ಕೈಗೊಂಡು ಎಲ್ಲವನ್ನು ನೋಡುವ ತವಕದೊಂದಿಗೆ ಹಿಂದುರುಗಿದೆವು.ಇಂತಹ ಐತಿಹಾಸಿಕ ಸ್ಥಳವನ್ನು ಇಂದಿನ ಯುವ ಜನಾಂಗ ಹೆಚ್ಚುಹೆಚ್ಚು ನೋಡಿ,ಮುಂದಿನ ಜನಾಂಗಕ್ಕೆ ಮಾದರಿಯಾಗುವ ರೀತಿಯಲ್ಲಿ ಈ ಐತಿಹಾಸಿಕ ಸ್ಥಳದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ನಡೆಸಲಿ ಎಂದು ಹಾರೈಸುತ್ತೇನೆ.

ಚಿತ್ರದುರ್ಗದ ಕಲ್ಲಿನ ಕೋಟೆ ಮತ್ತು ಕೋಟೆಯನ್ನು ಕಟ್ಟಿದ ಪಾಳೆಯಗಾರರ ಸ್ಮಾರಕಗಳನ್ನು ಉಳಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯ ನಡೆಯದಿರುವುದು ಮತ್ತು ಈ ಬಗ್ಗೆ ಬೆರಳೆಣಿಕೆಯ ಇತಿಹಾಸಕ್ತರು ಹೊರತುಪಡಿಸಿ ಎಲ್ಲರೂ ಮೌನವಾಗಿರುವುದು ಅತ್ಯಂತ ನೋವಿನ ವಿಷಯ ಎಂದೆನಿಸುತ್ತದೆ.

ಐತಿಹಾಸಿಕ ಮಹತ್ವದ ಸ್ಮಾರಕಗಳ ನಿರ್ಲಕ್ಷ್ಯದಿಂದ ದುರ್ಗದ ಬೆಟ್ಟದಲ್ಲಿ ಅನಾಥವಾಗಿರುವ ಶ್ರೀ ರಾಜಾ ವೀರ ಬಿಚ್ಚುಗತ್ತಿ ಭರಮಣ್ಣ ನಾಯಕರ ಸಮಾಧಿ, ಶ್ರೀ ರಾಜಾ ವೀರ ಓಬಣ್ಣ ನಾಯಕರ ಸಮಾಧಿ, ವೀರ ಮಹಿಳೆ ಒನಕೆ ಓಬವ್ವರ ಸಮಾಧಿ, ದಾವಣಗೆ ಜಿಲ್ಲೆಯ ಮಾಯಾಕೊಂಡದಲ್ಲಿ ಇರುವ ಶ್ರೀ ರಾಜಾ ವೀರ ಹಿರೇ ಮದಕರಿ ನಾಯಕರ ಸಮಾಧಿ, ಶ್ರೀ ರಾಜಾ ವೀರ ಮತ್ತಿ ತಿಮ್ಮಣ್ಣ ನಾಯಕರ ಸಮಾಧಿಗಳು ಅತ್ಯಂತ ದುಃಸ್ಥಿತಿ ತಲುಪಿವೆ.

ಶ್ರೀ ರಾಜಾ ವೀರ ಮದಕರಿ ನಾಯಕರ ಸಮಾಧಿ (ಸ್ಮಾರಕ) ಇಲ್ಲ. ಶ್ರೀ ರಾಜಾ ವೀರ ದೊಡ್ಡ ಮದಕರಿ ನಾಯಕರ ಸಮಾಧಿ ಸ್ಥಳವನ್ನು ಉಳಿಸುವ ಕಾರ್ಯವೇ ನಡೆದಿಲ್ಲ. ಚಿತ್ರದುರ್ಗದ ಕೋಟೆಯನ್ನು ಈಗಾಗಲೇ ಸಾವಿರಾರು ಕುಟುಂಬಗಳು ಅತಿಕ್ರಮಿಸಿ ಮನೆ ಕಟ್ಟಿಕೊಂಡಿವೆ, ಕೋಟೆಯ ಹಲವು ಸುತ್ತುಗಳು ನಾಶವಾಗಿವೆ. ನಮ್ಮ ಐತಿಹಾಸಿಕ ಪರಂಪರೆ ನಮ್ಮೆದುರಿಗೇ ಹಾಳಾಗುತ್ತಿದೆ.

ಪರಮರ್ಷನ ಗ್ರಂಥಗಳು:

  1. ಲಕ್ಷ್ಮಣ್ ತೆಲಗಾವಿ. ನೋಡಬನ್ನಿ ಚಿತ್ರದುರ್ಗ
  2. ರಾಜಶೇಖರಪ್ಪ ಬಿ. ದುರ್ಗಾ ಶೋಧ
  3. ಸೋಮಶೇಖರ್ ಎಸ್ ವೈ. ಕರ್ನಾಟಕ ದೇವಾಲಯ ಕೋಶ-ಚಿತ್ರದುರ್ಗ ಜಿಲ್ಲೆ

.    .    .

Discus